ಕರ್ನಾಟಕದಲ್ಲಿ ನಕ್ಷಲರ ವಿರುದ್ಧ ಗ್ರೀನ್ ಹಂಟ್ ಮಾದರಿಯ ಕಾರ್ಯಾಚರಣೆಗೆ ಮುನ್ನುಡಿ ?
ಉಡುಪಿ: ಛತ್ತೀಸ್ ಘಡ್ ರಾಜ್ಯದಲ್ಲಿ ನಕ್ಷಲ್ ಚಳುವಳಿಯನ್ನು ನಿರ್ನಾಮ ಮಾಡಲು ಅಲ್ಲಿನ ಸರಕಾರ ಗ್ರೀನ್ ಹಂಟ್ ಕಾರ್ಯಾಚರಣೆಯನ್ನು ಕೈಗೊಂಡಂತೆ, ಕರ್ನಾಟಕ ಸರಕಾರವೂ ವಿಶೇಷ ಕಾರ್ಯಾಚರಣೆಯನ್ನು ನಡೆಸಲು ನಿರ್ಧರಿಸಿದೆಯೇ ಎಂಬ ಸಂಶಯ ಇದೀಗ ವ್ಯಕ್ತಗೊಂಡಿದೆ.
ಪಶ್ಚಿಮ ಘಟ್ಟ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಸಿಪಿಐ (ಮಾವೋವಾದಿ) ಹೋರಾಟವನ್ನು ಧಮನಿಸಲು ಜಿಲ್ಲೆಯ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ನೂರು ಮಂದಿ ಯುವಕರನ್ನು ಪೋಲೀಸ್ ಇಲಾಖೆಗೆ ಸೇರ್ಪಡೆ ಮಾಡಲು ಸರಕಾರ ನಿರ್ಧರಿಸಿರುವ ವಿಷಯ ರಾಜ್ಯ ಪೋಲೀಸ್ ಮಹಾ ನಿರ್ದೇಶಕರಾದ ಶಂಕರ್ ಬಿದರಿ ಅವರ ಬಾಯಿಯಿಂದ ಹೊರಬಿದ್ದಿದ್ದು, ಇದು ಅನೇಕ ಸಂಶಯಗಳಿಗೆ ಕಾರಣವಾಗಿದೆ.
ಇಂದು ಹೆಬ್ರಿಯಲ್ಲಿ ನಡೆದ, ಹೆಬ್ರಿ ಸಮೀಪದ ಕಾಡಿನಲ್ಲಿ ನಕ್ಷಲರಿಂದ ಹತ್ಯೆಗೀಡಾದ ಪೋಲೀಸ್ ಮಾಹಿತಿದಾರ ಸದಾಶಿವ ಗೌಡ ಅವರ ಕುಟುಂಬಕ್ಕೆ ನಷ್ಟ ಪರಿಹಾರ ನೀಡುವ ಸಮಾರಂಭದಲ್ಲಿ ರಾಜ್ಯ ಪೋಲೀಸ್ ಮಹಾ ನಿರ್ದೇಶಕರಾದ ಶಂಕರ್ ಬಿದರಿ ಅವರು ಮಾತನಾಡುತ್ತಾ, ಜಿಲ್ಲೆಯ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ 18 ರಿಂದ 25 ವರ್ಷ ವಯೋಮಾನದ 100 ಮಂದಿ ಯುವಕರನ್ನು ಪೋಲೀಸ್ ಇಲಾಖೆಗೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಕ್ಷಲ್ ಚಳುವಳಿಯಲ್ಲಿರುವ ಹೆಚ್ಚಿನವರೂ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಇವರ ವಿರುದ್ಧ ಬಂದೂಕು ಕೈಗೆತ್ತಿಕೊಂಡು ಹೊಡೆದುರುಳಿಸಲು ಅದೇ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಮುಗ್ದ ಯುವಕರ ಕೈಗೆ ಬಂದೂಕು ನೀಡುವುದೆಂದರೆ ಅದು ಮತ್ತೊಂದು ಗ್ರೀನ್ ಹಂಟ್ ಕಾರ್ಯಾಚರಣೆಯೇ ಆಗಲಿದೆ ಎಂಬುದನ್ನು ಯಾರು ಬೇಕಾದರೂ ಅಂದಾಜಿಸಬಹುದಾಗಿದೆ.
ಕರ್ನಾಟಕದಲ್ಲಿ ನಕ್ಷಲರನ್ನು ಧಮನಿಸಲು ಆದಿವಾಸಿಗಳನ್ನೇ ಉಪಯೋಗಿಸುವುದೆಂದರೆ, ಮುಂದೆ ನಡೆಯಬಹುದಾದ ಸಾವು ನೋವುಗಳಿಗೆ ಬಡ ಮತ್ತು ಮುಗ್ದ ಆದಿವಾಸಿಗಳೇ ಬಲಿಯಾಗಲಿ ಎಂಬಂತೆ ಆಗಲಿದೆ. ಮತ್ತೆ ಮಾನವ ಹಕ್ಕಿನ ಮೇಲೆ ದೌರ್ಜನ್ಯ ನಡೆಯಲಿದೆ ಅಷ್ಟೇ ಎಂದು ಮಾನವ ಹಕ್ಕು ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಛತ್ತೀಸ್ ಘಡ್ ರಾಜ್ಯದಲ್ಲಿ ಅಲ್ಲಿನ ಸರಕಾರ ನಕ್ಷಲರ ವಿರುದ್ಧ ನಡೆಸಿದ ಇದೇ ಮಾದರಿಯ ಕಾರ್ಯಾಚರಣೆಗೆ ಸಾವಿರಾರು ಮಂದಿ ಆದಿವಾಸಿಗಳು ಬಲಿಯಾಗಿದ್ದರು. ಬಳಿಕ ಮಾನವ ಹಕ್ಕು ಹೋರಾಟಗಾರರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ನ್ಯಾಯಾಲಯವು ಸರಕಾರದ ಗ್ರೀನ್ ಹಂಟ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿತ್ತು.
ಹೆಬ್ರಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಸದಾಶಿವ ಗೌಡ ಅವರ ತಾಯಿಗೆ 3 ಲಕ್ಷ ರು. ಪರಿಹಾರ ಧನವನ್ನು ವಿತರಿಸಿದ ಶಂಕರ್ ಬಿದರಿ ಅವರು, ಕರ್ನಾಟಕದಲ್ಲಿ ಎಂದಿಗೂ ನಕ್ಕ್ಷಲ್ ಚಳುವಳಿಗೆ ಭವಿಷ್ಯವಿಲ್ಲ. ಹಾಗಾಗಿ ನಕ್ಷಲ್ ಚಳುವಳಿಯಲ್ಲಿ ತೊಡಗಿರುವ ಜನರು ಸರಕಾರ ಘೋಷಿಸಿರುವ ಶರಣಾಗತಿ ಪ್ಯಾಕೇಜನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಶರಣಾಗತಿಯಾಗುವಂತೆ ಬಹಿರಂಗ ಮನವಿ ಮಾಡಿಕೊಂಡರು.
ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಡಾ.ವೈ.ಎಸ್.ರವಿ ಕುಮಾರ್, ಎ.ಎನ್.ಎಫ್. ಅಧಿಕಾರಿ ಅಲೋಕ್ ಮೊದಲಾದವರು ಉಪಸ್ಥಿತರಿದ್ದರು.